ಉದ್ಯೋಗಿನಿ ಯೋಜನೆಯಡಿ ಸಾಲ ಪಡೆದ ಮಹಿಳೆಯು ಟೈಲರ್ ಅಂಗಡಿ ಭೇಟಿ ಪರಿಶೀಲನೆ ಮಾಡಿದರು.
*ಮಹಿಳಾ ಅಭಿವೃದ್ಧಿ ನಿಗಮದ ಪ್ರಗತಿ ಪರಿಶೀಲನಾ ಸಭೆ*
*ಉತ್ತಮ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ-ಜಿ.ಪದ್ಮಾವತಿ*
ಮೈಸೂರು,ಡಿ.03, ಅಧಿಕಾರದಲ್ಲಿದ್ದಾಗ ನಾವು ಮಾಡಿರುವ ಉತ್ತಮ ಕೆಲಸಗಳು ಶಾಶ್ವತವಾಗಿ ಉಳಿಯಬೇಕು. ಆಗ ಮಾತ್ರ ನಮ್ಮ ಕೆಲಸಕ್ಕೆ ಪರಿಪೂರ್ಣತೆ ಸಿಗುತ್ತದೆ ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪದ್ಮಾವತಿ ಅವರು ಹೇಳಿದರು.
ಇಂದು ವಿಜಯನಗರ 2 ನೇ ಹಂತದಲ್ಲಿರುವ ಕೃಷ್ಣದೇವರಾಯ ವೃತ್ತ ಹತ್ತಿರದ ಸ್ತ್ರೀಶಕ್ತಿ ಭವನದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಛೇರಿಯಲ್ಲಿ ನಡೆದ ಮಹಿಳಾ ಅಭಿವೃದ್ಧಿ ನಿಗಮದ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಹಿಳಾ ಅಭಿವೃದ್ಧಿ ನಿಗಮಕ್ಕೆ 95 ಕೋಟಿ ಅನುದಾನ ನೀಡಿದ್ದಾರೆ. ಶಕ್ತಿ ಯೋಜನೆಯ ಮೂಲಕ ಮಹಿಳೆಯರು ಸರ್ಕಾರಿ ಬಸ್ನಲ್ಲಿ ಗುರುತಿನ ಚೀಟಿ ತೋರಿಸಿ ಹೋಗಬಹುದು. ಹೀಗೆ ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ತರಲಾಗಿದೆ ಅವುಗಳನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಮಹಿಳೆಯರಿಗಾಗಿ ಇಟ್ಟಿರುವ ಅನುದಾನವನ್ನು ನಿಗಧಿತವಾಗಿ ಬಳಸಿಕೊಳ್ಳಲೆಂದು ನಿರ್ಧಿಷ್ಟ ಗುರುತಿನ ಚೀಟಿಯನ್ನು ಜಿಲ್ಲಾಧಿಕಾರಿಗ ಮೂಲಕ ನೀಡಲಾಗುತ್ತದ್ದು, ಇದರಿಂದ ಎಲ್ಲರಿಗೂ ಯೋಜನೆ ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ. ಯಾರೊಬ್ಬರೂ ಯೌವನದಲ್ಲಿಯೇ ಬಿಕ್ಷಾಟನೆಗೆ ಒಳಗಾಗಬಾರದು. ಸರ್ಕಾರದ ಜಾರಿ ಮಾಡಿರುವ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು, ನೆರವಿಗಾಗಿ ಸ್ವಯಂ ಸೇವಾ ಸಂಸ್ಥೆ ಸಂಪರ್ಕಸಿ ಸ್ವ-ಉದ್ಯೋಗ ಆರಂಭಿಸಬೇಕು. ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಸ್ತ್ರೀಶಕ್ತಿ ಆರಂಭಿಸಿದ್ದು, ಇಂದು ಬಹಳಷ್ಟು ಜನ ಅದರಿಂದ ಸ್ವಾಭಿಮಾನಿಗಳಾಗಿ ಬದುಕುತ್ತಿದ್ದಾರೆ ಎಂದೂ ಸಂತಸ ವ್ಯಕ್ತಪಡಿಸಿದರು.
ನಾನು ಭೇಟಿ ಮಾಡಿದ ಜಿಲ್ಲೆಗಳ ಪೈಕಿ ಕೆಲವು ಜಿಲ್ಲೆಗಳಲ್ಲಿ ಲೀಡ್ ಬ್ಯಾಂಕ್ ಸಮಸ್ಯೆ ಕಂಡು ಬರುತ್ತಿದ್ದು, 58 ಕೋಟಿ ಸಬ್ಸಿಡಿಯನ್ನು ತಮ್ಮಲ್ಲೇ ಇಟ್ಟುಕೊಂಡಿದ್ದಾರೆ. ಹಾಗಾಗಿ ನಿಗಮದಿಂದ ನೇರವಾಗಿ ಸಾಲ ನೀಡಿ, ವಸೂಲಿ ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಮುಂದಿನ ವರ್ಷ ಕಾರ್ಯರೂಪಕ್ಕೆ ಬರುತ್ತದೆ. ಮೈಕ್ರೋ ಫೈನಾನ್ಸ್ ಹಾವಳಿಗೆ ಮಹಿಳೆಯರು ಜೋತು ಬೀಳದೆ, ಸರ್ಕಾರಿ ಸೌಲಭ್ಯವನ್ನು ಬಳಸಿಕೊಳ್ಳಿ ಎಂದರು.
11 ವಿಧಾನಸಭಾ ಕ್ಷೇತ್ರದಲ್ಲಿನ ಎಲ್ಲಾ ಯೋಜನೆಯ ಆಭ್ಯರ್ಥಿಗಳ ಅರ್ಜಿಗಳನ್ನು ನಮ್ಮ ನಿಗಮಕ್ಕೆ ತಲುಪಿಸಿದರೆ, ಅದನ್ನು ಸಂಗ್ರಹಿಸಿ ಲೀಡ್ ಬ್ಯಾಂಕ್ನೊoದಿಗೆ ಸಭೆ ನಡೆಸಿ ಎಲ್ಲಾ ಅರ್ಜಿದಾರರಿಗೂ ಸಾಲ ದೊರೆಯುವಂತೆ ಮಾಡಲಾಗುವುದು. ಸರ್ಕಾರಿ ಕೆಲಸ ಎಲ್ಲರಿಗೂ ಸಿಗುವುದಿಲ್ಲ, ಸಿಕ್ಕಾಗ ಅದನ್ನು ಅಧಿಕಾರಿಗಳು ಧನಾತ್ಮಕವಾಗಿ ಬಳಸಿಕೊಂಡು, ಪ್ರಾಮಾಣಿಕವಾಗಿ ಜನಸಾಮಾನ್ಯರಿಗಾಗಿ ಕೆಲಸ ಮಾಡಿಸಿಕೊಡಬೇಕು ಎಂದು ಹೇಳಿದರು.
ಲೀಡ್ ಬ್ಯಾಂಕ್ನ ಪ್ರಭಾರ ಮ್ಯಾನೇಜರ್ ಪ್ರದೀಪ್ ಅವರು ಮಾತನಾಡಿ, ಮುಂದಿನ ವಾರದಲ್ಲಿ ತಾಲ್ಲೂಕು ಮಟ್ಟದ ಪ್ರತಿನಿಧಿಗಳೊಂದಿಗೆ ಸಭೆಯ ಮೂಲಕ ಸಮಾಲೋಚನೆ ನಡೆಸಿ ಉಳಿದಿರುವ ಅರ್ಜಿಗಳನ್ನು ವಿಲೇವಾರಿ ಮಾಡಲು ಕ್ರಮ ವಹಿಸಲಾಗುತ್ತದೆ ಎಂದರು.
ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಪ್ರೇಮಕುಮಾರಿ ಅವರು ಮಾತನಾಡಿ, ಮುಂಬರುವ ದಿನಗಳಲ್ಲಿ ಸ್ತ್ರೀಯರಿಗೆ ಸಹಕಾರಿಯಾಗುವಂತಹ ಇನ್ನಷ್ಟು ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ ಅದನ್ನು ಮಹಿಳೆಯರು ಸದುಪಯೋಗಪಡಿದಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಅರ್ಜಿ ಹಾಕಿದ ಲಿಂಗತ್ವ ಅಲ್ಪಸಂಖ್ಯಾತರಿಗೆ ಹಾಗೂ ಮಹಿಳಾ ಫಲಾನುಭವಿಗಳಿಗೆ ಫಲಾನುಭವಿ ಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಉಪನಿರ್ದೇಶಕರಾದ ಬಿ.ಬಸವರಾಜು, ಮಹಿಳಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿರೀಕ್ಷಕರಾದ ಶ್ರೀಮತಿ ಜಗದಾಂಭ ಹೆಚ್. ವಿ, ಆನಂದ ಜ್ಯೋತಿ ನೆಟ್ವರ್ಕ್ನ ಮಹಾದೇವ, ಆಶೋದಯ ಸಂಸ್ಥೆ ಸುಧಾ, ಹೇಮಲತಾ, ಜಿಲ್ಲಾ ನಿರೂಪಣಾಧಿಕಾರಿ ಮಂಜುನಾಥ, ಹಾಗೂ 7 ರೈನ್ ಬೋ ಸಂಸ್ಥೆಯ, ಪ್ರಣತಿ ಪ್ರಕಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.